ಅಕ್ಕನ ಜೊತೆ ಅನೈತಿಕ ಸಂಬಂಧ ಹೊಂದಿದ ವ್ಯಕ್ತಿಯ ಹತ್ಯೆಗೆ ಸುಪಾರಿ ಕೊಟ್ಟ ತಮ್ಮ ಬಂಧನ
ಬೆಂಗಳೂರು: ಅಕ್ಕನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ವ್ಯಕ್ತಿಯೊಬ್ಬನ ಹತ್ಯೆಗೆ ಸುಪಾರಿ ಕೊಟ್ಟ ಆರೋಪಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಹೇಮಂತ್ ರೆಡ್ಡಿ ಎಂದು ಗುರುತಿಸಲಾಗಿದೆ.
ತನ್ನ ಅಕ್ಕನ ಜೊತೆ ಶಶಾಂಕ್ ಎಂಬಾತ ಸಲುಗೆಯಿಂದ ಇದ್ದಿದ್ದಕ್ಕೆ ಆರೋಪಿ ಆತನ ಹತ್ಯೆಗೆ ಸುಪಾರಿ ಕೊಟ್ಟಿದ್ದ ಎಂಬ ಮಾಹಿತಿ ತಿಳಿದು ಬಂದಿದೆ. ಸುಪಾರಿ ಪಡೆದಿದ್ದ ಹಂತಕರು ಪೊಲೀಸರ ಬಲೆಗೆ ಬಿದ್ದಿದ್ದು, ಆರೋಪಿ ಹಣ ಕೊಟ್ಟಿದ್ದು ಬಾಯ್ಬಿಟ್ಟಿದ್ದರು ಎಂದು ತಿಳಿದು ಬಂದಿದೆ.
ಸೋಮವಾರ ರಾತ್ರಿ ಮಂಕಿ ಕ್ಯಾಪ್ ಹಾಕಿಕೊಂಡು ಮಾರಕಾಸ್ತ್ರ ಹಿಡಿದು ಶಶಾಂಕ್ಗಾಗಿ ಚಿಕ್ಕಜಾಲ ಬಳಿಯ ಗಂಟಿಗಾನಹಳ್ಳಿಯಲ್ಲಿ ಸುಪಾರಿ ಗ್ಯಾಂಗ್ ಕಾಯುತ್ತಿತ್ತು. ಈ ವೇಳೆ ಹೊಯ್ಸಳ ಪೊಲೀಸರು ರೌಂಡ್ಸ್ಗೆ ತೆರಳಿದ್ದಾಗ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿತ್ತು. ಬಳಿಕ ತನಿಖೆ ವೇಳೆ ಸುಪಾರಿ ನೀಡಿದ್ದ ಹೇಮಂತ್ ರೆಡ್ಡಿ ಹೆಸರನ್ನು ಹಂತಕರ ಗ್ಯಾಂಗ್ ಬಾಯ್ಬಿಟ್ಟಿತ್ತು.
ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.