ಸೂಪರ್ ಸ್ಟಾರ್ ರಜನಿಕಾಂತ್'ಗೆ 73ನೇ ಹುಟ್ಟುಹಬ್ಬದ ಸಂಭ್ರಮ
ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಇಂದು 73ನೇ ಹುಟ್ಟುಹಬ್ಬದ ಸಂಭ್ರಮ. ಇದರ ಅಂಗವಾಗಿ ನಟ ಧನುಷ್ ಸೇರಿದಂತೆ ದೇಶಾದ್ಯಂತ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ನಟ ಧನುಷ್ ಸೇರಿದಂತೆ ಹಲವು ಸೆಲೆಬ್ರಿಟಿಗಳು, ಅಭಿಮಾನಿಗಳು, ರಜನಿ ಕಾಂತ್ ಉತ್ತಮ ಆರೋಗ್ಯ ಹೊಂದಿ, ದೀರ್ಘ ಕಾಲ ಬಾಳಲಿ ಎಂದು ಆಶಿಸುತ್ತಾ ಶುಭಾಶಯ ಕೋರುತ್ತಿದ್ದಾರೆ.
ರಜನಿಕಾಂತ್ 1950 ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನಲ್ಲಿ ಅವರು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಕಂಡಕ್ಟರ್ ಆಗುವುದಕ್ಕೂ ಮುನ್ನ ಕೂಲಿ ಕೆಲಸ ಹಾಗೂ ಬಡಗಿ ಕೆಲಸ ಮಾಡಿದ್ದರು. ಈಗ ಅವರು ಸೂಪರ್ ಸ್ಟಾರ್ ಆಗಿದ್ದಾರೆ. 1975ರಲ್ಲಿ ತಮಿಳು ಅಪೂರ್ವ ರಾಗಂಗಳ್ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ವಿಭಿನ್ನ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದು, ದಾದಾ ಸಾಹೇಬ್ ಪಾಲ್ಕೆ, ಪದ್ಮ ವಿಭೂಷಣ, ಪದ್ಮ ಭೂಷಣ, ಎನ್ ಟಿಆರ್ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ- ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಅಲ್ಲದೇ ಸಿಬಿಎಸ್ಇ ಪಠ್ಯಪುಸ್ತಕದಲ್ಲಿ ರಜನಿ ಬಗ್ಗೆ ಪಾಠ ಇದೆ. ಸಿಬಿಎಸ್ಇ 6ನೇ ತರಗತಿ ವಿದ್ಯಾರ್ಥಿಗಳಿಗೆ ರಜನಿಕಾಂತ್ ಕುರಿತು ಪಠ್ಯ ಇದೆ.
ಹಲವು ಕನ್ನಡ ಚಿತ್ರಗಳಲ್ಲಿ ರಜನಿಕಾಂತ್ ನಟಿಸಿದ್ದಾರೆ. 'ಭೈರವಿ' ಯಶಸ್ಸಿನ ನಂತರ ರಜನಿಕಾಂತ್ ಹೆಸರಿಗೆ 'ಸೂಪರ್ ಸ್ಟಾರ್' ಪಟ್ಟ ಸೇರ್ಪಡೆ ಆಯಿತು.
ತಮಿಳು, ತೆಲುಗು, ಕನ್ನಡ ಮತ್ತು ಬಂಗಾಳಿ ಚಿತ್ರಗಳಲ್ಲಿ ನಟಿಸಿದ ರಜನಿಕಾಂತ್ ಅವರು 73ರ ಹರೆಯದಲ್ಲೂ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅವರು ಇಲ್ಲಿಯವರೆಗೆ ಸುಮಾರು 169 ಚಿತ್ರಗಳನ್ನು ಪೂರ್ಣಗೊಳಿಸಿದ್ದಾರೆ. ಅವರು ಪ್ರಸ್ತುತ ತಮ್ಮ 170 ನೇ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ರಜನಿಕಾಂತ್ ಅವರಿಗೆ ಆಧ್ಯಾತ್ಮಿಕತೆಯಲ್ಲಿ ತುಂಬಾ ಆಸಕ್ತಿ. ಅವರು ಯೋಗ ಮತ್ತು ಧ್ಯಾನ ಮಾಡುತ್ತಾರೆ. ಅಲ್ಲದೆ ತಮ್ಮ ಪ್ರತಿಯೊಂದು ಚಿತ್ರ ಬಿಡುಗಡೆಗೂ ಮುನ್ನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಅವರು ಆಗಾಗ ಹಿಮಾಲಯಕ್ಕೆ ಭೇಟಿ ನೀಡುತ್ತಾರೆ. ರಾಮಕೃಷ್ಣ ಪರಮಹಂಸ, ಸ್ವಾಮಿ ಸಚ್ಚಿದಾನಂದ, ರಾಘವೇಂದ್ರ, ಸ್ವಾಮಿ ಮಹಾವತಾರ್ ಬಾಬಾಜಿ ಮತ್ತು ರಮಣ ಮಹರ್ಷಿಗಳಂತಹ ಆಧ್ಯಾತ್ಮಿಕ ಗುರುಗಳಲ್ಲಿ ನಂಬಿಕೆ.