ಹದಿಹರೆಯದ ಹುಡುಗಿಯರ ಬಗೆಗಿನ ಕಲ್ಕತ್ತಾ ಹೈ ಕೋರ್ಟ್ ತೀರ್ಪಿಗೆ ಸುಪ್ರೀಂ ಆಕ್ಷೇಪ
ನವದೆಹಲಿ: ಹುಡುಗಿಯರು ಹದಿಹರೆಯದಲ್ಲಿ ಲೈಂಗಿಕ ಪ್ರಚೋದನೆ ಅಥವಾ ಲೈಂಗಿಕ ಆಸಕ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ದೊಡ್ಡ ಪರಿಣಾಮ ಎದುರಿಸಬೇಕಾಗಬಹುದು ಎಂಬ ಕಲ್ಕತ್ತಾ ಹೈಕೋರ್ಟ್ ನ ತೀರ್ಪನ್ನು ಭಾರತದ ಸರ್ವೋಚ್ಛ ನ್ಯಾಯಾಲಯ ಟೀಕಿಸಿದೆ.
ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಲು ಕಲ್ಕತ್ತಾದ ಉಚ್ಛ ನ್ಯಾಯಾಲಯದಿಂದ ನೀಡಲಾದ ಸಲಹೆಗಳನ್ನು ಅತ್ಯಂತ ಆಕ್ಷೇಪಾರ್ಹ ಮತ್ತು ಸಂಪೂರ್ಣವಾಗಿ ಅನಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯುವತಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅ.18 ರಂದು ನೀಡಿದ ತೀರ್ಪಿನಲ್ಲಿ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಸ್ ಮತ್ತು ಪಾರ್ಥ ಸಾರಥಿ ಸೇನ್ ಅವರ ವಿಭಾಗೀಯ ಪೀಠವು ಲೈಂಗಿಕವಾಗಿ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವುದು ಪ್ರತಿಯೊಬ್ಬ ಹದಿಹರೆಯದ ಹುಡುಗಿಯ ಕರ್ತವ್ಯವಾಗಿದೆ ಎಂದು ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ನ್ಯಾಯಾಧೀಶರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಅಥವಾ ಬೋಧಿಸುವುದನ್ನು ನಾವು ನಿರೀಕ್ಷಿಸುವುದಿಲ್ಲ ಎಂದಿದೆ.