ಬೆಂಗಳೂರಿನಲ್ಲಿ ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಜನರನ್ನು ತಂಪಾಗಿಸಿದ ಮಳೆರಾಯ
ಬೆಂಗಳೂರು: ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಬೆಂಗಳೂರಿಗೆ ಸುಮಾರು ಆರು ತಿಂಗಳ ನಂತರ ನಗರದ ಬಹುತೇಕ ಕಡೆ ಗುರುವಾರ ಸಂಜೆ, ಗುಡುಗು–ಮಿಂಚು ಸಹಿತ ಹಗುರವಾಗಿ ಮಳೆಯಾಗಿದೆ.
ಬನಶಂಕರಿ, ಹಂಪಿನಗರ, ವಿಜಯನರ, ರಾಜರಾಜೇಶ್ವರಿನಗರ ಹಾಗೂ ನಾಯಂಡಹಳ್ಳಿ ಸುತ್ತಮುತ್ತ ಉತ್ತಮ ಮಳೆಯಾಯಿತು. ನಗರದ ಬಹುತೇಕ ಪ್ರದೇಶಗಳಲ್ಲಿ ಸುಮಾರು 10 ನಿಮಿಷ ಸಾಧಾರಣ ಮಳೆಯಾಗಿದೆ.
ಈ ವರ್ಷದಲ್ಲಿ ನಗರದ ಎಲ್ಲೆಡೆಯೂ ಮಳೆಯಾಗಿರುವುದು ಇದೇ ಮೊದಲು. ಗುರುವಾರ ಬೆಳಿಗ್ಗೆಯಿಂದಲೇ ಮೋಡ ಹಾಗೂ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ಮೋಡ ಕವಿದು ಮಳೆಯ ವಾತಾವರಣ ಸೃಷ್ಟಿಯಾಗಿತ್ತು. ಸುಮಾರು 7.30ರ ವೇಳೆಯಲ್ಲಿ ನಗರದಲ್ಲಿ ಮಳೆಯಾಯಿತು.
ಗರುಡಾಚಾರ್ಯಪಾಳ್ಯ, ಎಚ್. ಗೊಲ್ಲಹಳ್ಳಿ, ವಿಶ್ವೇಶಪುರ, ಕಾಟನ್ಪೇಟೆ, ಸಂಪಂಗಿರಾಮನಗರ, ಪುಲಕೇಶಿನಗರ, ಹೆಬ್ಬಾಳ, ಕುಶಾಲನಗರ, ವಿದ್ಯಾರಣ್ಯಪುರ, ಜಕ್ಕೂರು, ಹೂಡಿ, ವಿಜ್ಞಾನನಗರ, ಅರೆಕೆರೆ, ಬೆಳ್ಳಂದೂರು, ಚೊಕ್ಕಸಂದ್ರಗಳಲ್ಲಿ 0.5 ಮಿ.ಮೀನಿಂದ 1.5 ಮಿ.ಮೀವರೆಗೆ ಮಳೆಯಾಗಿದೆ. ಗುಡುಗು, ಮಿಂಚಿನ ಆರ್ಭಟವಿದ್ದರೂ ಸುಮಾರು 10 ನಿಮಿಷ ಮಾತ್ರ ಮಳೆಯಾಯಿತು.