ಗಂಡ-ಹೆಂಡತಿ ನಡುವಿನ ಜಗಳವನ್ನು ಬಿಡಿಸಲು ಬಂದಿದ್ದ ಪೊಲೀಸರನ್ನು ಕೊಡಿ ಹಾಕಿದ ಗ್ರಾಮಸ್ಥರು
ಚಿಕ್ಕಬಳ್ಳಾಪುರ: ಗಂಡ-ಹೆಂಡತಿಯ ನಡುವಿನ ಜಗಳವನ್ನು ಬಿಡಿಸಲು ಬಂದಿದ್ದ ಪೊಲೀಸರನ್ನೇ ಕೂಡಿಹಾಕಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಅಮ್ಮಗಾರಹಳ್ಳಿ ಗ್ರಾಮದಲ್ಲಿ ನಿನ್ನೆ(ಡಿ.14)ರಂದು ತಡರಾತ್ರಿ ನಡೆದಿದೆ.
ಅಮ್ಮಗಾರಹಳ್ಳಿ ಗ್ರಾಮದಲ್ಲಿ ಶಿವಾನಂದ ಹಾಗೂ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದ ಶಿವಾನಂದನ ಪತ್ನಿ ಐಶ್ವರ್ಯ ನಡುವೆ ಕೌಟುಂಬಿಕ ಕಲಹದಿಂದ ದೂರ ಇದ್ದರು. ಇವರಿಗೆ ಒಂದು ಗಂಡು ಮಗು ಸಹ ಇದೆ. ಗುರುವಾರ ಐಶ್ವರ್ಯ ಮಗುವನ್ನು ತನ್ನ ಜೊತೆ ಕಳುಹಿಸಿ ಕೊಡಿ ಅಂತ ಗಂಡನ ಮನೆ ಬಳಿ ಬಂದು ಗಲಾಟೆ ಮಾಡಿದ್ದಾಳೆ. ಪತಿ ಒಪ್ಪದೇ ಇದ್ದಾಗ ಹೋಯ್ಸಳ ಪೊಲೀಸರಿಗೆ ಕರೆ ಮಾಡಿ ತನ್ನ ಹಾಗೂ ಪತಿ ನಡುವೆ ಗಲಾಟೆಯಾಗಿದೆ ನ್ಯಾಯ ಕೊಡಿಸಿ ಎಂದು ಹೇಳಿಕೊಂಡಿದ್ದಾಳೆ.
ಅಮ್ಮಗಾರಹಳ್ಳಿಗೆ ಬಂದ ಹೊಯ್ಸಳ ಪೊಲೀಸರು ಮಗುವನ್ನು ಕೊಡಿ, ಠಾಣೆಗೆ ಬಂದು ತಂದೆ ತಾಯಿ ಇಬ್ಬರು ನ್ಯಾಯ ಪಂಚಾಯತಿ ಮಾಡಿಕೊಂಡು ಮಗುವನ್ನು ಕರೆದುಕೊಂಡು ಹೋಗಿ ಎಂದು ಹೇಳಿದ್ದರು. ಆದರೆ ಮಗುವನ್ನು ಸಾಂತ್ವನ ಕೇಂದ್ರಕ್ಕೆ ಬಿಡದೇ ಗ್ರಾಮದ ಮುಂಭಾಗದ ಮುಖ್ಯ ರಸ್ತೆಗೆ ಬಂದು ಐಶ್ವರ್ಯ ತಾಯಿ ಯಶೋದಮ್ಮ ಅವರಿಗೆ ಒಪ್ಪಿಸಿದ್ದಾರೆ.
ಈ ವಿಚಾರ ತಿಳಿದು ಮಗುವಿನ ತಂದೆಯ ಕಡೆ ಮಗುವನ್ನು ತಂದು ನಮಗೆ ವಾಪಸ್ ಒಪ್ಪಿಸುವವರೆಗೂ ಹೊಯ್ಸಳ ವಾಹನವನ್ನು ಬಿಡುವುದಿಲ್ಲ ಎಂದು ಇಡೀ ಗ್ರಾಮಸ್ಥರು ಪೊಲೀಸ್ ವಾಹನ ಹಾಗೂ ಪೊಲೀಸರನ್ನು ಕೊಡಿ ಹಾಕಿದ್ದಾರೆ.