ನಿಜ್ಜರ್ ಹತ್ಯೆ ವಿಚಾರದಲ್ಲಿ ಭಾರತ ವಿರುದ್ಧ ಷಡ್ಯಂತ್ರ ನಡೆದಿದೆ ಎಂದ ವರ್ಮಾ
ನವದೆಹಲಿ: ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜಂಟರ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಟ್ರುಡೊ ಹೇಳಿಕೆಗಳ ಬಳಿಕ ಉಭಯ ದೇಶಗಳ ಸಂಬಂಧ ತೀವ್ರವಾಗಿ ಹಳಸಿದೆ. ಇದೀಗ ಭಾರತೀಯ ರಾಜತಾಂತ್ರಿಕ ಸಂಜಯ್ ಕುಮಾರ್ ವರ್ಮಾ ಹೇಳಿಕೆಯೊಂದನ್ನು ನೀಡಿದ್ದು, ನಿಜ್ಜರ್ ಹತ್ಯೆ ಕುರಿತು ಸಾಕ್ಷ್ಯ ನೀಡುವಂತೆ ಕೆನಡಾಕ್ಕೆ ಸವಾಲು ಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ವರ್ಮಾ, ನಿಜ್ಜರ್ ಹತ್ಯೆಯಲ್ಲಿ ಭಾರತ ಅಥವಾ ಭಾರತೀಯ ಏಜೆಂಟ್ಗಳ ಕೈವಾಡವಿದೆ ಎಂದು ಹೇಳಲು ಉನ್ನತ ಮಟ್ಟದ ಯಾರೋ ಒಬ್ಬರು ಸೂಚನೆಗಳನ್ನು ನೀಡಿದ್ದಾರೆ ಎಂದು ತೋರುತ್ತದೆ ಎಂದು ಹೇಳಿದ್ದಾರೆ.
ನಿಜ್ಜರ್ ಹತ್ಯೆ ಕುರಿತು ಕೆನಡಾ ಅಥವಾ ಕೆನಡಾದ ಮಿತ್ರರಾಷ್ಟ್ರಗಳ ಮೂಲಕ ಭಾರತಕ್ಕೆ ಯಾವುದೇ ಖಚಿತವಾದ ಪುರಾವೆ ಇದುವರೆಗೆ ಕೊಟ್ಟಿಲ್ಲ. ಹೀಗಾಗಿ ಭಾರತ ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತೀಯ ಏಜೆಂಟ್ಗಳು ಭಾಗಿಯಾಗಿಲ್ಲ ಎಂದು ಖಚಿತವಾಗಿ ಹೇಳಬಹುದು.
ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಹೇಳಿದ್ದಾರೆ. ಕಳೆದ ಕೆಲತಿಂಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದ್ದದೆ. ಆದರೆ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ಮತ್ತು ವ್ಯಾಪಾರ ಒಪ್ಪಂದ ಮಾತುಕತೆ ನಡೆಸಲು ಕೆನಡಾದೊಂದಿಗೆ ಭಾರತ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.