ಹಿಟ್ ಅಂಡ್ ರನ್: ಇಂದಿನಿಂದ ರಾಜ್ಯಾದ್ಯಂತ ಲಾರಿ ಚಾಲಕರ ಮುಷ್ಕರ
ಬೆಂಗಳೂರು: 10 ವರ್ಷ ಜೈಲು ಶಿಕ್ಷೆಯೊಂದಿಗೆ ₹7 ಲಕ್ಷ ದಂಡ ವಿಧಿಸುವ ಹೊಸ "ಹಿಟ್ ಅಂಡ್ ರನ್" ಕಾನೂನಿನ ವಿರುದ್ಧ ಕರ್ನಾಟಕ ಟ್ರಕ್ ಚಾಲಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಇದರ ಭಾಗವಾಗಿ ಇಂದು ರಾತ್ರಿ 12ಗಂಟೆಯಿಂದ ಯಾವ ಲಾರಿ ಕೂಡ ಸಂಚಾರ ಮಾಡುವುದಿಲ್ಲ.
ಹಿಟ್ ಅಂಡ್ ರನ್ ಪ್ರಕರಣಗಳಿಗೆ ಹೊಸದಾಗಿ ಜಾರಿಗೆ ತಂದಿರುವ ಕಾನೂನನ್ನು ವಿರೋಧಿಸಿ ಕರ್ನಾಟಕದಲ್ಲಿ ಟ್ರಕ್ ಚಾಲಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಿದ್ಧರಾಗಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಟ್ರಕ್ ಚಾಲಕರು ಮುಷ್ಕರವನ್ನು ಬೆಂಬಲಿಸಲು ಮತ್ತು ತಮ್ಮ ವಾಹನಗಳನ್ನು ರಸ್ತೆಗಿಳಿಸದಂತೆ ಕೋರಲಾಗಿದೆ. ಇದರಿಂದಾಗಿ ಇಂದು ಟ್ರಕ್ ಚಾಲಕರು ಲಾರಿಗಳನ್ನು ರಸ್ತೆಗಿಳಿಸುವುದಿಲ್ಲ ಎಂದು ಕರ್ನಾಟಕ ಲಾರಿ ಮಾಲೀಕರ ಸಂಘ ತಿಳಿಸಿದೆ.
ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಿಗೆ ₹ 7 ಲಕ್ಷ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶ ನೀಡಲಾಗಿದೆ. ಈ ಕಾನೂನು ವಿರೋಧಿಸಿ ಟ್ರಕ್ ಚಾಲಕರು, ಟ್ಯಾಕ್ಸಿ ಮತ್ತು ಬಸ್ ನಿರ್ವಾಹಕರು ರಾಷ್ಟ್ರವ್ಯಾಪಿ ಮುಷ್ಕರವನ್ನು ಪ್ರಾರಂಭಿಸಿದರು. ಆದರೆ ಈ ಕಾನೂನು ಜಾರಿಗೆ ತರುವ ಮುನ್ನ ನಮ್ಮೊಂದಿಗೆ ಚರ್ಚಿಸಬೇಕಿತ್ತು. ಇದು ಸಮ್ಮತವಾದ ಕಾನೂನು ಅಲ್ಲ ಎಂದು ಚಾಲಕರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ. ಕೂಡಲೆ ನೂತನ ಕಾನೂನನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.