ಇಂದು ಮಧ್ಯಾಹ್ನದಿಂದಲೇ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆ
ಬೆಂಗಳೂರು: ಬರೋಬ್ಬರಿ 6 ತಿಂಗಳ ಬಳಿಕ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಭರ್ಜರಿ ಮಳೆಯಾಗಿದೆ. ಇಂದು ಮಧ್ಯಾಹ್ನದಿಂದಲೇ ಬೆಂಗಳೂರಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ನಗರದ ಕೇಂದ್ರ ಭಾಗ ಮತ್ತು ಹೊರ ವಲಯದಲ್ಲಿ ಜೋರು ಮಳೆಯಾಗಿದೆ.
ನಿನ್ನೆ ಸಂಜೆಯಷ್ಟೇ ಒಂದಿಷ್ಟು ಕಾಲ ಸುರಿದ ಮಳೆ ಬಳಿಕ ಬಿಡುವು ಕೊಟ್ಟಿತ್ತು. ಇಂದು ಬೆಳಿಗ್ಗೆ ಒಂದಿಷ್ಟು ಮೋಡ ಕವಿದ ವಾತಾವಣ ಕಾಣಿಸಿಕೊಂಡಿತ್ತು. ಮಧಾಹ್ನ 1 ವೇಳೆಗೆ ಬಿಸಿಲು ಕಾಣಿಸಿಕೊಂಡ್ರೂ 2 ಗಂಟೆ ಬಳಿಕ ಏಕಾಏಕಿ ಮಳೆ ಸುರಿಯಲಾರಂಭಿಸಿತು.
ಬೆಳಂದೂರು, ಮಹದೇವಪುರ, ಕೆಆರ್ ಪುರ, ಕಾಡಬಿಸರಹಳ್ಳಿ, ಮಲ್ಲೇಶ್ವರ, ಶಿವಾಜಿನಗರ, ಕೆಆರ್ವೃತ್ತ, ಗಾಂಧಿ ನಗರ, ಎಂಜಿ ರಸ್ತೆ, ಹಲಸೂರು, ಸಂಪಂಗಿ ರಾಮನಗರ, ಕೆಆರ್ ಮಾರುಕಟ್ಟೆ, ಬಸವನಗುಡಿ, ಬನಶಂಕರಿ, ಜೆಪಿ ನಗರ, ರಾಜಾಜಿನಗರನಲ್ಲಿ ಸಾಧಾರಣ ಮಳೆಯಾಗುತ್ತಿದೆ. ಇನ್ನು ರಾಜರಾಜೇಶ್ವರಿ ನಗರ, ಮೈಸೂರು ರಸ್ತೆ ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಇದು ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಇತ್ತ ಮಳೆಯಾಗುತ್ತಿರೋ ಕಾರಣ ನಗರದಲ್ಲೂ ಭಾರೀ ಟ್ರಾಫಿಕ್ ಹೆಚ್ಚಳವಾಗಿದೆ. ಆದರೂ ಸಿಲಿಕಾನ್ ಸಿಟಿ ಮಂದಿ ಈ ಮಳೆಯನ್ನು ಸ್ವಾಗತಿಸಿ ಎಂಜಾಯ್ ಮಾಡ್ತಾಇದ್ದಾರೆ.