ತೃತೀಯ ಲಿಂಗಿಯ ಹತ್ಯೆ ಪ್ರಕರಣ: ಮಹಿಳೆಯ ಬಂಧನ
ಬೆಂಗಳೂರು: ತೃತೀಯ ಲಿಂಗಿಯನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.
ತೃತೀಯ ಲಿಂಗಿ ಮಂಜಿ ಬಾಯ್ ಅಲಿಯಾಸ್ ಮಂಜ ನಾಯ್ಕ್ (42) ಕೊಲೆಯಾದವರು.
ಕಳೆದ ಏ. 3ರಂದು ಜೆ.ಬಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಜಿ ಬಾಯ್ ಶವ ಪತ್ತೆಯಾಗಿತ್ತು. ಈ ಬಗ್ಗೆ ಮೊದಲಿಗೆ ಪೊಲೀಸರು ಯುಡಿಆರ್ (UDR) ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ನಂತರ ಮರಣೋತ್ತರ ಪರೀಕ್ಷೆ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಯಲಾಗಿತ್ತು. ಹೀಗಾಗಿ ಮಂಜಿ ಬಾಯ್ ಜತೆ ವಾಸವಿದ್ದ ಪ್ರೇಮ (51) ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ಪ್ರೇಮಾ ತಾನೇ ಮಂಜಿಯನ್ನು ಕೊಲೆ ಮಾಡಿದ್ದಾಗಿ ಹೇಳಿ ನಂತರ ಕಾರಣವನ್ನು ಬಾಯ್ಬಿಟ್ಟಿದ್ದಳು.
ಏನಿದು ಪ್ರಕರಣ: ಪ್ರೇಮ ತನ್ನ ಪತಿಯನ್ನು ಕಳೆದುಕೊಂಡ ಮೇಲೆ ಕಳೆದ 20 ವರ್ಷದಿಂದ ತೃತೀಯ ಲಿಂಗಿ ಮಂಜಿ ಬಾಯ್ ಜತೆ ವಾಸವಿದ್ದಳು. ಮಂಜಿ ಬಾಯ್ ಕಂಪನಿಯೊಂದರ ಕ್ಯಾಂಟಿನ್ನಲ್ಲಿ ಕೆಲಸ ಮಾಡುತ್ತಿದ್ದರೆ, ಪ್ರೇಮಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು.
ಈ ನಡುವೆ ಚೆನ್ನಾಗಿಯೇ ಇದ್ದ ಅವರಿಬ್ಬರು ಕಳೆದ ಏ.26ರಂದು ಮನೆಯಲ್ಲಿದ್ದಾಗ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳ ಆಗಿತ್ತು. ಇವರಿಬ್ಬರ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮಂಜಿ ಬಾಯ್ ಪ್ರೇಮಾಳಿಗೆ ಚಾಕುವಿನಿಂದ ಚುಚ್ಚಲು ಮುಂದಾಗಿದ್ದ.ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರೇಮಾ ಟವಲ್ನಿಂದ ಮಂಜಿಬಾಯ್ ಕುತ್ತಿಗೆ ಬಿಗಿದಿದ್ದಳು. ಅಷ್ಟೇ ಉಸಿರುಗಟ್ಟಿ ಮಂಜಿ ಬಾಯ್ ಕ್ಷಣಾರ್ಧದಲ್ಲೇ ಮೃತಪಟ್ಟಿದ್ದ.