ಯಕ್ಷ ಧ್ರುವ ಪಟ್ಲ ಫೌಂಡೇಶನ್ : ಪಂಚಮ ವಾರ್ಷಿಕ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಗಳೂರು: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ)ನ ಮಂಗಳೂರು ನಗರ ಘಟಕದ ಪಂಚಮ ವಾರ್ಷಿಕ ಸಂಭ್ರಮವು ಮೇ 23 ಗುರುವಾರ ಸಂಜೆ 3 ರಿಂದ ರಾತ್ರಿ 9ರ ತನಕ ಮಂಗಳೂರು ಪುರ ಭವನದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಎಮ್ ಆರ್ ಪಿ ಎಲ್ ಕಂಟ್ರಾಕ್ಟರ್ ಅಸೋಸಿಯೇಷನ್ ನ ಅಧ್ಯಕ್ಷರಾದ ಬಾಳದ ಗುತ್ತು ಲ| ಸಂತೋಷ್ ಪೂಂಜಾ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಇಂದು ಮಂಗಳೂರಿನ ಬಲ್ಮಠ ಕ್ವಾಲಿಟಿ ಹೋಟೆಲಿನ ಕುಡ್ಲ ಪೆವಿಲಿಯನ್ ನಲ್ಲಿ ನಡೆದ ಕಾರ್ಯಕ್ರಮವನ್ನು ಯೋಗ ಗುರು ಜೆ ವಿ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಘಟಕದ ಅಧ್ಯಕ್ಷರಾದ ತಾರಾನಾಥ ಶೆಟ್ಟಿ ಬೋಳಾರ್ ವಹಿಸಿದರು. ಮಂಗಳೂರು ಘಟಕದ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಘಟಕದ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ ಪ್ರಸ್ತಾವನೆ ಗೈದರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಘಟಕದ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ, ಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆ ಆರತಿ ಆಳ್ವ, ನಗರ ಘಟಕದ ಮಹಿಳಾ ಅಧ್ಯಕ್ಷೆ ಅನಿತಾ ಪಿಂಟೋ, ಕೋಶಾಧಿಕಾರಿ ಗೋಪಿನಾಥ್ ಶೆಟ್ಟಿ ಉಪಸ್ಥಿತಿದ್ದರು. ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೇಂದ್ರಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಕೆ ಭಂಡಾರಿ ಮಾತನಾಡಿ ಯಕ್ಷ ಧ್ರುವ ಪಟ್ಲ ಸಂಭ್ರಮ 2024 ,26.05 2024 ರಂದು ಅಡ್ಯಾರು ಗಾರ್ಡನ್ ನಲ್ಲಿ ನಡೆಯಲಿದ್ದು ಇದಕ್ಕೆ ಪೂರ್ವಾಭಾವಿಯಾಗಿ ಮಂಗಳೂರು ಘಟಕದ ಪಂಚಮ ವಾರ್ಷಿಕ ಸಂಭ್ರಮ ನಡೆಯಲಿದ್ದು.
ಉಡುಪಿಯ ವಿಶು ಶೆಟ್ಟಿ ಅಂಬಲಪಾಡಿ ಯವರಿಗೆ ಸಾಧನಾ ಪ್ರಶಸ್ತಿ ಹಾಗೂ 3 ಮಂದಿ ಅಶಕ್ತ ಕಲಾವಿದರಿಗೆ ಗೌರವ ಸಹಾಯ ಧನದೊಂದಿಗೆ ಸನ್ಮಾನವನ್ನು ಮಾಡಲಾಗುವುದು ಎಂದು ತಿಳಿಸಿದರು. ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಎ ಕೃಷ್ಣ ಶೆಟ್ಟಿ ತಾರೆಮಾರ್ ಸ್ವಾಗತಿಸಿ ನಿರೂಪಿಸಿದರು. ಕೇಂದ್ರ ಘಟಕದ ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ಅಶೋಕ್ ನಗರ ಧನ್ಯವಾದ ಸಮರ್ಪಿಸಿದರು.