ಬೆಂಗಳೂರು-ಮಂಗಳೂರು ನಡುವೆ 6-8 ಪಥಗಳ ಹೈಸ್ಪೀಡ್ ಕಾರಿಡಾರ್ ನಿರ್ಮಾಣ?
ಬೆಂಗಳೂರು: ಬೆಂಗಳೂರು-ಮಂಗಳೂರು ನಡುವೆ ಇಂಟಿಗ್ರೇಟೆಡ್ ಗ್ರೀನ್ ಫೀಲ್ಡ್ ಹೈ ಸ್ಪೀಡ್ ಕಾರಿಡಾರ್ ಅಸ್ತಿತ್ವಕ್ಕೆ ಬಂದಲ್ಲಿ ಈ ಮಾರ್ಗದಲ್ಲಿರುವ ಎಲ್ಲ ನಗರಗಳು ಅತಿವೇಗದಲ್ಲಿ ಅಭಿವೃದ್ಧಿ ಹೊಂದುತ್ತವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್, ಯೋಜನೆಯ ಸಲಹಾ ಮತ್ತು ಫೆಸಿಲಿಟೇಷನ್ ಸಂಸ್ಥೆ ಯುರೋಪಿಯನ್ ಉದ್ಯಮ ಹಾಗೂ ತಂತ್ರಜ್ಞಾನ ಕೇಂದ್ರ (ಇಬಿಟಿಸಿ) ನ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಚಿವರು ಮಾತನಾಡಿದರು. ಈ ವೇಳೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಭಾಗಿಯಾಗಿದ್ದರು.
ಇಂಟಿಗ್ರೇಟೆಡ್ ಗ್ರೀನ್ ಫೀಲ್ಡ್ ಹೈ ಸ್ಪೀಡ್ ಕಾರಿಡಾರ್ ಯೋಜನೆಯಲ್ಲಿ ಬೆಂಗಳೂರು-ಮಂಗಳೂರು ನಡುವೆ 6-8 ಪಥಗಳ ಹೈಸ್ಪೀಡ್ ಕಾರಿಡಾರ್ ನಿರ್ಮಾಣದ ಪ್ರಸ್ತಾವನೆ ಹೊಂದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಗಳನ್ನು ಹೊಂದಿರುವ ದಿನೇಶ್ ಗುಂಡೂರಾವ್, ಕಾರಿಡಾರ್ ಮಾರ್ಗ ನಕ್ಷೆಯನ್ನು ಹೆಚ್ಚಿನ ಮಾಹಿತಿಯೊಂದಿಗೆ ಚರ್ಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಸಭೆಯಲ್ಲಿ ಭರವಸೆ ನೀಡಿದರು.