"ನಾಲಿಗೆ ಮೇಲೆ ಹಿಡಿತವಿರಲಿ": ಉದಯನಿಧಿಗೆ ವಿತ್ತ ಸಚಿವೆ ಖಡಕ್ ವಾರ್ನಿಂಗ್
ದೆಹಲಿ: ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಡುವಿನ ಕೇಂದ್ರ ಪರಿಹಾರ ನಿಧಿ ಹಂಚಿಕೆ ಕುರಿತ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕೇಂದ್ರದ ಪರಿಹಾರ ನಿಧಿ ಹಂಚಿಕೆಯ ವಿಚಾರವಾಗಿ ಮಾತನಾಡುವ ವೇಳೆ ಉದಯನಿಧಿ ಸ್ಟ್ಯಾಲಿನ್, ಯಾರಪ್ಪನ ಮನೆಯ ಹಣ ಕೇಳ್ತಿಲ್ಲ ಅಂತ ಹೇಳಿದ್ದರು.
ಇದಕ್ಕೆ ಅವರದೇ ಭಾಷೆಯಲ್ಲಿ ಉತ್ತರ ನೀಡಿರುವ ಸಚಿವೆ ನಿರ್ಮಲಾ ಸೀತಾರಾಮನ್, 'ನೀವೊಬ್ಬರು ಸಚಿವರು. ನಿಮ್ಮ ನಾಲಿಗೆಯ ಮೇಲೆ ಹಿಡಿತವಿರಲಿ' ಎಂದು ಎಚ್ಚರಿಸಿದ್ದಾರೆ.
'ಇದು ಎಂದಿಗೂ ಅವರ ಭಾಷೆಯಾಗಿತ್ತು. ಅವರು ಹೇಗೆ ಮಾತನಾಡುತ್ತಾರೆ ಅನ್ನೋದಕ್ಕೆ ಇದು ಸಾಕ್ಷಿ. ಈ ರೀತಿ ಮಾತನಾಡುವ ಇಂಥ ವ್ಯಕ್ತಿಗಳು ಅವರ ಅಪ್ಪನ ಆಸ್ತಿಯಿಂದ ಸಚಿವ ಸ್ಥಾನದಲ್ಲಿದ್ದಾರೆಯೇ? ಎಂದು ನಾನು ಕೇಳಬಲ್ಲೆ’ ಎಂದು ಹೇಳಿದ್ದರು.
ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಉದಯನಿಧಿ, 'ಎಲ್ಲಾ ವ್ಯಕ್ತಿಗಳ ಜೊತೆ ಒಂದೇ ರೀತಿಯಲ್ಲಿ ಮಾತನಾಡಲು ಸಾಧ್ಯವಿಲ್ಲ. ಕೆಲವೊಂದು ವ್ಯಕ್ತಿಗಳ ಜೊತೆ ಕೆಲವೊಂದು ರೀತಿಯಲ್ಲೇ ಮಾತನಾಡಬೇಕಾಗುತ್ತದೆ’ ಎಂದು ಹೇಳಿದ್ದಾರೆ.