ಬಿಜೆಪಿ ಪರವಾಗಿರುವಂತೆ ಪಕ್ಷದವರಿಗೆ ದೇವೇಗೌಡರ ಪಾಠ
ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ಕಮಲ ಪಡೆಯ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವಂತೆ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪಕ್ಷದವರಿಗೆ ಕರೆ ನೀಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತನಾಡುತ್ತ, ಕೋಲಾರ, ಮಂಡ್ಯ, ಹಾಸನ ಕ್ಷೇತ್ರಗಳನ್ನು ನಮಗೆ ಕೊಡಲಾಗಿದೆ. ಉಳಿದ 25 ಕ್ಷೇತ್ರದಲ್ಲಿ ನೀವು ಬಿಜೆಪಿ ಚಿಹ್ನೆಗೆ ಮತ ಹಾಕಬೇಕು ಎಂದು ಮನವಿ ಮಾಡಿದ್ದಾರೆ.
ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದು, 3 ಜೆಡಿಎಸ್ ಕ್ಷೇತ್ರಕ್ಕೂ ಹೋರಾಟ ಮಾಡುತ್ತಾರೆ. ಇಂದು ನಮ್ಮ ಅಳಿಯ ಡಾ. ಮಂಜುನಾಥ್ ಒಪ್ಪಿಗೆಯೊಂದಿಗೆ ಕೇಂದ್ರದ ನಾಯಕರ ಒತ್ತಾಯದಂತೆ ಅವರನ್ನು ಬಿಜೆಪಿಯಿಂದ ನಿಲ್ಲಿಸಲಾಗಿದೆ ಎಂದು ದೇವೇಗೌಡರು ಹೇಳಿದರು.
ತಮ್ಮ ಅಳಿಯನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅವರು, ಡಾ.ಮಂಜುನಾಥ್ ರಾಜಕೀಯಕ್ಕೆ ಬರುವ ವ್ಯಕ್ತಿ ಅಲ್ಲ. ಇಡೀ ಭಾರತದಲ್ಲಿ 2 ಸಾವಿರ ಹೃದಯದ ರೋಗದ ಚಿಕಿತ್ಸೆ ಮಾಡುವ ಆಸ್ಪತ್ರೆ ಮಾಡಿರುವ ಬಗ್ಗೆ ನನಗೆ ಹೆಮ್ಮೆಯಿದೆ ಎಂದರು.
ಇದರೊಂದಿಗೆ ಮೈಸೂರಿನಿಂದ ಕಣಕ್ಕಿಳಿದಿರುವ ರಾಜರಿಗೆ ಹಾಗು ತುಮಕೂರಿನ ಸೋಮಣ್ಣ ಸೇರಿದಂತೆ ಎಲ್ಲರಿಗೂ ಬೆಂಬಲ ಕೊಡಬೇಕು ಎಂದು ವಿನಂತಿಸಿದ್ದಾರೆ.