ಮಕ್ಕಳಲ್ಲಿದ್ದ ಆತಂಕ ದೂರ ಮಾಡಿದ ಪ್ರಧಾನಿ ಮೋದಿ: ಏನೆಲ್ಲ ಟಿಪ್ಸ್ ಕೊಟ್ರು ಗೊತ್ತ ?
ದೆಹಲಿ: 10ನೇ ಮತ್ತು 12ನೇ ತರಗತಿಯ 2024ರ ಬೋರ್ಡ್ ಎಕ್ಸಾಮ್ಗೆ ಮುನ್ನ ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುತ್ತಿರುವ ʼಪರೀಕ್ಷಾ ಪೆ ಚರ್ಚಾ 2024' ಕಾರ್ಯಕ್ರಮದಲ್ಲಿ ಇಂದು ಹಲವು ವಿಚಾರಗಳನ್ನು ಚರ್ಚಿಸಿದರು.
ಇಂದು ದಿಲ್ಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಕಾರ್ಯಕ್ರಮ ನಡೆಯಿತು. ದೇಶಾದ್ಯಂತದಿಂದ ಬಂದ ಹಲವು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪರೀಕ್ಷೆ ಬಗ್ಗೆ ಇದ್ದ ಆತಂಕವನ್ನು ದೂರ ಮಾಡಿದ್ದಾರೆ.
ಮಕ್ಕಳ ಪರೀಕ್ಷೆಯ ಒತ್ತಡದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಪ್ರತಿಯೊಬ್ಬ ಪೋಷಕರು ಖಂಡಿತವಾಗಿಯೂ ಈ ಸಮಸ್ಯೆಗಳನ್ನು ಯಾವುದಾದರೂ ರೂಪದಲ್ಲಿ ಅನುಭವಿಸಿರುತ್ತಾರೆ. ಯಾವುದೇ ರೀತಿಯ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಮೊದಲು ತಂದುಕೊಳ್ಳಬೇಕು, ನೀವೇ ತಯಾರಿ ನಡೆಸಬೇಕು ಎಂದರು.
ನಿಮ್ಮ ಸ್ನೇಹಿತನಿಗೆ ಯಾವುದೇ ವಿಷಯದಲ್ಲಿ 100ಕ್ಕೆ 90 ಅಂಕ ಬಂದಿದೆ ಎಂದಾದರೆ ನಿಮಗೆ ಕೇವಲ 10 ಅಂಕ ಬರುತ್ತೆ ಎಂದರ್ಥವೇ, ನಿಮಗೂ ಕೂಡ 100 ಅಂಕಗಳೇ ಇರುತ್ತವೆ. ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ಸ್ನೇಹಿತನ ಬಗ್ಗೆ ಹೊಟ್ಟೆಕಿಚ್ಚು ಪಡುವುದಕ್ಕಿಂತ ನೀವು ಎಲ್ಲಿ ಹಿಂದಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಂಡು ಸ್ನೇಹಿತರಿಂದ ಸಲಹೆ ಪಡೆದು ಮುನ್ನುಗ್ಗುವುದರ ಬಗ್ಗೆ ಆಲೋಚಿಸಿ ಎಂದು ಮೋದಿ ಸಲಹೆ ನೀಡಿದ್ದಾರೆ.
ಪರೀಕ್ಷೆಯ ಹಾಲ್ಗೆ ಅರ್ಧ ಗಂಟೆಗೂ ಮೊದಲು ತಲುಪಿಕೊಂಡರೆ ಯಾವುದೇ ಉದ್ವೇಗ ಇರುವುದಿಲ್ಲ. ಹತ್ತು ನಿಮಿಷದಷ್ಟು ಕಾಲ ಜೋಕ್ ಮಾಡಲು, ನಗಲು ಮೀಸಲಿಡಿ. ಅದರಿಂದ ಮನಸ್ಸು ಹಗುರಾಗುತ್ತದೆ. ನಂತರ ಪ್ರಶ್ನೆ ಪತ್ರಿಕೆ ನಿಮ್ಮ ಕೈಗೆ ಬಂದಾಗ, ನೀವು ಅದನ್ನು ಆರಾಮವಾಗಿ ಮಾಡಲು ಸಾಧ್ಯವಾಗುತ್ತದೆ.
ಪರೀಕ್ಷಾ ಹಾಲ್ನಲ್ಲಿ ನಾವು ಸಬ್ಜೆಕ್ಟ್ ಹೊರತುಪಡಿಸಿ ಇತರ ವಿಷಯಗಳ ಮೇಲೆ ಮನಸ್ಸು ಕೇಂದ್ರೀಕರಿಸುವುದರಿಂದ ನಮ್ಮ ಶಕ್ತಿ ಅನಗತ್ಯವಾಗಿ ವ್ಯರ್ಥವಾಗುತ್ತದೆ. ನಾವು ನಮ್ಮಲ್ಲೇ ಕಳೆದುಹೋಗಬೇಕು. ಮಹಾಭಾರತದ ಅರ್ಜುನ ಮತ್ತು ಪಕ್ಷಿನೋಟದ ಕಥೆಯನ್ನು ನೀವು ಕೇಳಿರಬಹುದು. ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ಆತಂಕಕ್ಕೆ ಕಾರಣವೇನೆಂದರೆ, ಪರೀಕ್ಷೆಯ ಸಮಯದಲ್ಲಿ, ಸಮಯ ಸಾಕಾಗಲಿಕ್ಕಿಲ್ಲ ಎಂದು ನೀವು ಭಾವಿಸುತ್ತೀರಿ. ಪ್ರಶ್ನೆಪತ್ರಿಕೆ ಕೈಗೆ ಬಂದ ಕೂಡಲೇ ಸಮಗ್ರವಾಗಿ ಓದಿ. ಮೊದಲು ಯಾವ ಪ್ರಶ್ನೆಗಳನ್ನು ಪ್ರಯತ್ನಿಸಿದರೆ ಉತ್ತಮ ಎಂದು ನೋಟ್ ಮಾಡಿಕೊಳ್ಳಿ. ಪ್ರತೀ ಪ್ರಶ್ನೆಗೂ ಸಮಯ ನಿಗದಿಪಡಿಸಿಕೊಳ್ಳಿ.
ಮೊಬೈಲ್ನಲ್ಲಿ ಒಂದರ ಹಿಂದೆ ಒಂದರಂತೆ ರೀಲುಗಳನ್ನು ನೋಡುತ್ತಾ ಹೋದರೆ ಸಮಯ ವ್ಯರ್ಥವಾಗುತ್ತದೆ. ನಿದ್ದೆ ಕೆಡುತ್ತದೆ, ಓದಿದ್ದನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ನಿದ್ರೆಯನ್ನು ಕೀಳಂದಾಜು ಮಾಡಬೇಡಿ. ಆಧುನಿಕ ಆರೋಗ್ಯ ವಿಜ್ಞಾನವು ನಿದ್ರೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ನಿಮಗೆ ಬೇಕಾದಷ್ಟು ನಿದ್ದೆ ಮಾಡುತ್ತೀರೋ ಇಲ್ಲವೋ ಎಂಬುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ನಿಮ್ಮ ಆಹಾರದಲ್ಲಿ ನಿಮ್ಮ ವಯಸ್ಸಿಗೆ ಅಗತ್ಯವಿರುವ ವಸ್ತುಗಳು ಇವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನಮ್ಮ ಆಹಾರದಲ್ಲಿ ಸಮತೋಲನವು ಆರೋಗ್ಯಕ್ಕೆ ಮುಖ್ಯವಾಗಿದೆ. ಫಿಟ್ನೆಸ್ಗಾಗಿ ವ್ಯಾಯಾಮವನ್ನು ಮಾಡಬೇಕು. ನೀವು ಪ್ರತಿದಿನ ಹಲ್ಲುಜ್ಜುವ ರೀತಿಯಲ್ಲಿ ವ್ಯಾಯಾಮ ಮಾಡಬೇಕು; ಅದರಲ್ಲಿ ಯಾವುದೇ ರಾಜಿ ಬೇಡ.
ಇಂದು, ಪರೀಕ್ಷೆಯಲ್ಲಿ ದೊಡ್ಡ ಸವಾಲು ಎಂದರೆ ಕೈಯಲ್ಲಿ ಬರೆಯುವುದು. ಇಂದು ಎಲ್ಲವೂ ಮೊಬೈಲ್, ಐಪ್ಯಾಡ್, ಕಂಪ್ಯೂಟರ್ನಲ್ಲಿ ನಡೆಯುತ್ತದಾದ್ದರಿಂದ ಬರೆಯುವ ಅಭ್ಯಾಸವೇ ಬಿಟ್ಟುಹೋಗಿದೆ. ಹೀಗಾಗಿ ದಿನನಿತ್ಯ ಅಧ್ಯಯನಕ್ಕಾಗಿ ಮೀಸಲಿಡುವ ಸಮಯದಲ್ಲಿ ಅರ್ಧ ಭಾಗ ಬರೆಯುವುದಕ್ಕಾಗಿಯೇ ಇಟ್ಟುಕೊಳ್ಳಿ.
ಅಭ್ಯಾಸದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಪರೀಕ್ಷೆಯ ಮೊದಲು, ವಿಷಯದ ಬಗ್ಗೆ ನೀವು ಓದಿದ್ದನ್ನು ಬರೆಯಿರಿ ಮತ್ತು ನಂತರ ಅದನ್ನು ನೀವೇ ಸರಿಪಡಿಸಿ. ನಿಮಗೆ ಈಜಲು ತಿಳಿದಿದ್ದರೆ ನೀರಿಗೆ ಇಳಿಯುವ ಭಯವಿಲ್ಲ. ಅಭ್ಯಾಸ ಮಾಡುವವನಿಗೆ ತಾನು ಜಯಿಸುತ್ತೇನೆ ಎಂಬ ವಿಶ್ವಾಸವಿರುತ್ತದೆ. ನೀವು ಎಷ್ಟು ಹೆಚ್ಚು ಬರೆಯುತ್ತೀರೋ ಅಷ್ಟು ತೀಕ್ಷ್ಣತೆ ನಿಮಗೆ ಸಿಗುತ್ತದೆ ಎಂದರು.
Join Pariksha Pe Charcha! Great to connect with students from across the country. https://t.co/z1UDFjYMWv
— Narendra Modi (@narendramodi) January 29, 2024