ತೇಜ್ ಪ್ರತಾಪ್ ಕನಸಿನಲ್ಲಿ ಬಂದ ʼಶ್ರೀರಾಮʼ ಅಯೋಧ್ಯೆ ಬರಲ್ಲ ಅಂದ್ರಂತೆ: ವಿಡಿಯೋ ವೈರಲ್
ಪಾಟ್ನಾ: ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಕಾಂಗ್ರೆಸ್, ಕಮ್ಯೂನಿಸ್ಟ್ ಸೇರಿದಂತೆ ಹಲವು ವಿಪಕ್ಷಗಳು ಬಹಿಷ್ಕಾರ ಹಾಕಿದೆ. ಆಹ್ವಾನ ತಿರಸ್ಕರಿಸಿ ಇದು ಬಿಜೆಪಿ ರಾಜಕೀಯ ಎಂದಿದೆ. ಆದರೆ ಬಿಹಾರದ ಸಚಿವ, ಆರ್ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಊಹೆಗೂ ನಿಲುಕದ ಹೇಳಿಕೆ ನೀಡಿ ಟ್ರೋಲ್ ಆಗಿದ್ದಾರೆ.
ಭಗವಾನ್ ಶ್ರೀರಾಮ ನನ್ನ ಕನಸಿನಲ್ಲಿ ಬಂದಿದ್ದ. ಅವರೆಲ್ಲಾ ನಾಟಕ ಮಾಡುತ್ತಿದ್ದಾರೆ. ಹೀಗಾಗಿ ಜನವರಿ 22ರಂದು ನಾನು ಅಯೋಧ್ಯೆಗೆ ತೆರಳುವುದಿಲ್ಲ ಎಂದು ಭಗವಾನ್ ಶ್ರೀರಾಮ ಕನಸಿನಲ್ಲಿ ಹೇಳಿದ್ದಾನೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿರುವ ವಿಡಿಯೋ ಭಾರಿ ವೈರಲ್ ಆಗಿದೆ.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ತೇಜ್ ಪ್ರತಾಪ್ ಯಾದವ್, ಬಿಜೆಪಿ ಲೋಕಸಭಾ ಚುನಾವಣೆಗಾಗಿ ರಾಮ ಮಂದಿರ ವಿಚಾರವನ್ನು ರಾಜಕೀಯ ಮಾಡುತ್ತಿದೆ. ರಾಮ ಕೇವಲ ಜನವರಿ 22ರಂದು ಮಾತ್ರ ಆಯೋಧ್ಯೆಯಲ್ಲಿರುತ್ತಾನಾ? ನನ್ನ ಕನಸಿನಲ್ಲಿ ಬಂದ ಶ್ರೀರಾಮ, ಅವರು ನಾಟಕ ಮಾಡುತ್ತಿದ್ದಾರೆ. ಹೀಗಾಗಿ ನಾನು ಜನವರಿ 22ರಂದು ಆಯೋಧ್ಯೆಗೆ ಹೋಗುವುದಿಲ್ಲ ಎಂದಿದ್ದಾನೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.
ತೇಜ್ ಪ್ರತಾಪ್ ಯಾದವ್ ನೀಡಿದ ಈ ಹೇಳಿಕೆ ಭಾರಿ ವೈರಲ್ ಆಗಿದೆ. ತೇಜ್ ಪ್ರತಾಪ್ ಯಾದವ್ ಈಗಲೂ ಸರಿ ಇದ್ದಾರಾ ಎಂದು ಹಲವರು ಪ್ರಶ್ನಿಸಿದ್ದಾರೆ.