ಪ.ಬಂಗಾಳದ ಸಂದೇಶ್ಖಾಲಿಯಲ್ಲಿ ರಿಪಬ್ಲಿಕ್ ಟಿವಿ ಪತ್ರಕರ್ತನ ಬಂಧನ
ಪಶ್ಚಿಮ ಬಂಗಾಳ: ರಿಪಬ್ಲಿಕ್ ಟಿವಿ ಪತ್ರಕರ್ತ ಸಂತು ಪಾನ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಇಂದು(ಫೆ.19) ಸಂದೇಶ್ಖಾಲಿಯಲ್ಲಿ ಬಂಧಿಸಿದ್ದಾರೆ. ಈ ವಿಚಾರವನ್ನು ಬಂಗಾಳ ಬಿಜೆಪಿ ರಾಜ್ಯ ಅಧ್ಯಕ್ಷ ಡಾ.ಸುಕಾಂತ ಮಜುಂದಾರ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, "ಸ್ಥಳೀಯರು ಎದುರಿಸುತ್ತಿರುವ ದೌರ್ಜನ್ಯಗಳ ಬಗ್ಗೆ ವರದಿ ಮಾಡಿದ್ದಕ್ಕಾಗಿ ಪಶ್ಚಿಮ ಬಂಗಾಳ ಪೊಲೀಸರು ಸಂದೇಶ್ಖಾಲಿಯಿಂದ ವರದಿಗಾರ ಸಂತು ಪಾನ್ ಅವರನ್ನು ಇಂದು ಬಂಧಿಸಿದ್ದಾರೆ.
ಇದು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ಮೇಲಿನ ಬೃಹತ್, ಅಮಾನವೀಯ ಮತ್ತು ನೇರ ದಾಳಿಯಾಗಿದೆ ಎಂದಿದ್ದಾರೆ. ಇನ್ನು ಪಾನ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ, "ನನ್ನ ವರದಿಗಾರನಿಗೆ ಸಾರ್ವಜನಿಕ ಸಾರಿಗೆಯಲ್ಲಿ ಹೋಗಲು ಅವಕಾಶ ನೀಡಲಿಲ್ಲ, ಒಂದೇ ಸ್ಥಳದಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ನಿಲ್ಲುವಂತೆ ಮಾಡಲಾಯಿತು. ನಂತರ ಯಾವುದೇ ನೋಟಿಸ್ ನೀಡದೆ ಅವರನ್ನು ದೈಹಿಕವಾಗಿ ಎಳೆದೊಯ್ದರು. ಕೊಲೆಗಾರನಿಗೂ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ.
ಸಂದೇಶ್ಖಾಲಿ ಪ್ರಕರಣದಲ್ಲಿ ಸತ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ರಿಪಬ್ಲಿಕ್ ಬಾಂಗ್ಲಾ ವರದಿಗಾರನನ್ನು ಪೊಲೀಸರು ಕಾನೂನುಬಾಹಿರವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಚಾನೆಲ್ ಹೇಳಿಕೆಯಲ್ಲಿ ತಿಳಿಸಿದೆ.